ಚಿಕ್ಕಮಗಳೂರು: ಪೋಷಕರು ಮಕ್ಕಳ ಮುಂದೆ ಒಳ್ಳೆಯ ನಡವಳಿಕೆಯನ್ನು ಪ್ರದರ್ಶಿಸಬೇಕು: ಅಜೀತ್ ಕುಮಾರ್
ಲಾರಿ ಮರಕ್ಕೆ ಡಿಕ್ಕಿ ಹೊಡೆದು ಇಬ್ಬರ ಸಾವು
ಚಿಕ್ಕಮಗಳೂರು, ಡಿ.೨೩: ವಿಧ್ಯಾರ್ಥಿಗಳ ಪೋಷಕರು ತಮ್ಮ ಮಕ್ಕಳನ್ನು ಅತ್ಯಂತ ಮುತುವರ್ಜಿಯಿಂದ ಪೋಷಿಸಿ ಸಮಾಜದಲ್ಲಿ ಸತ್ಪ್ರಜೆಗಳಾಗಿ ಬದುಕುವಂತೆ ಮಾಡಲು ಶ್ರಮಿಸಬೇಕು ಎಂದು ಮೂಡಿಗೆರೆ ತಾ.ಪಂ. ಅಧ್ಯಕ್ಷ ರಂಜನ್ ಅಜೀತ್ ಕುಮಾರ್ ಹೇಳಿದರು.
ಅವರು ಶುಕ್ರವಾರ ಮೂಡಿಗೆರೆ ಬಳಿಯ ಬಿಳಗುಳ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡುತ್ತಿದ್ದರು. ಪ್ರತಿಯೊಬ್ಬರಿಗೂ ಬಾಲ್ಯದ ದಿನಗಳಲ್ಲಿ ಕಲಿಯುವ ವಿಷಯಗಳು ಬದುಕಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಹೆಚ್ಚಿನ ಮಕ್ಕಳು ಪೋಷಕರನ್ನು ಅನುಕರಿಸುತ್ತಾರೆ. ಹೀಗಾಗಿ ಪೋಷಕರು ಮಕ್ಕಳ ಮುಂದೆ ಒಳ್ಳೆಯ ನಡವಳಿಕೆಯನ್ನು ಪ್ರದರ್ಶಿಸಬೇಕು ಎಂದರು.
ಬಳಿಕ ಶಿಕ್ಷಣ ಸಂಯೋಜಕ ರಾಜಪ್ಪ ಮಾತನಾಡಿ, ಶಾಲಾ ವಾರ್ಷಿಕೋತ್ಸವಗಳು ಮಕ್ಕಳ ಜ್ಞಾನಾರ್ಜನೆಯಲ್ಲಿ ಉತ್ಸಹವನ್ನು ತುಂಬಬಲ್ಲದು. ಸರಕಾರವು ಪ್ರತಿ ಶಾಲೆಗಳಲ್ಲಿ ದತ್ತು ಯೋಜನೆಯನ್ನು ಜಾರಿಗೊಳಿಸಿದ್ದು ಪ್ರತಿ ಶಾಲೆಗಳಲ್ಲಿ ಯಾವುದೇ ವಿಧ್ಯಾರ್ಥಿಯನ್ನು ಅಥವಾ ತರಗತಿಯನ್ನು ಅಥವಾ ಇಡೀ ಶಾಲೆಯನ್ನೇ ದತ್ತು ಪಡೆಯುವ ಅವಕಾಶವಿದೆ. ಎಸ್ಎಸ್ಎ ಯೋಜನೆಯಡಿ ವಿಧ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಕುಡಿಯುವ ನೀರು, ಕಾಂಪೌಂಡು, ಕೊಠಡಿಗಳ ನಿರ್ಮಾಣ, ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದು ವಿವರಿಸಿದರು.
ಇದೇ ವೇಳೆ ಸುಮಾರು ೫೦ ಬಡ ವಿಧ್ಯಾರ್ಥಿಗಳಿಗೆ ಸಮವಸ್ತ್ರಗಳ ಖರೀದಿಗೆ ಹಣಕಾಸಿನ ನೆರವು ನೀಡಿದ ಚಂದ್ರು ಒಡೆಯರ್ ಮತ್ತು ಅಹಮ್ಮದ್ ಭಾವರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ಜಯಗಳಿಸಿದ ವಿಧ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಬಳಿಕ ವಿಧ್ಯಾರ್ಥಿಗಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಈ ಸಮಯದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಮಂಜಪ್ಪ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ.ಸದಸ್ಯೆ ಹೂವಮ್ಮ, ಗ್ರಾ.ಪಂ.ಅಧ್ಯಕ್ಷೆ ಕಲ್ಯಾಣಿ, ಮಾಜಿ ಅಧ್ಯಕ್ಷ ಲತೀಪ್, ಐಸಮ್ಮ, ಕಾಂಗ್ರೇಸ್ ಮುಖಂಡ ಸಂಪತ್ಕುಮಾರ್, ರಾಮಚಂದ್ರ ಒಡೆಯರ್, ಲೋಕೇಶ್, ನಳಿನಿ ತ್ಯಾಗರಾಜ್, ಮೊಹಿನುದ್ದೀನ್, ಲಕ್ಷ್ಮಣಗೌಡ, ಜಾನಪ್ಪ ಉಪಸ್ಥಿತರಿದ್ದರು.
ಲಾರಿ ಮರಕ್ಕೆ ಡಿಕ್ಕಿ ಹೊಡೆದು ಇಬ್ಬರ ಸಾವು
ಚಿಕ್ಕಮಗಳೂರು, ಡಿ.೨೩: ಅಕ್ಕಿ ತುಂಬಿಕೊಂಡಿದ್ದ ಲಾರಿಯೊಂದು ಮರಕ್ಕೆ ಡಿಕ್ಕಿ ಹೊಡೆದಿರುವ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಕಡೂರು ತಾಲ್ಲೂಕಿನ ಸಂತೇಕೆರೆ ಎಂಬಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ನಸುಕಿನಲ್ಲಿ ನಡೆದಿದೆ.
ಮೃತನನ್ನು ದಾವಣಗೆರೆ ಜಿಲ್ಲೆಯ ಮಂಜುನಾಥ್(೩೫) ಮತ್ತು ಅರುಣ ಕುಮಾರ್(೩೨) ಎಂದು ಗುರುತಿಸಲಾಗಿದೆ. ಲಾರಿಯು ರಾಣೆಬೆನ್ನೂರಿನಿಂದ ಅರಸಿಕೆರೆಗೆ ಅಕ್ಕಿಯನ್ನು ತುಂಬಿಕೊಂಡು ಹೊರಟಿತ್ತು. ಈ ಸಮಯದಲ್ಲಿ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿ ಬದಿಯ ಮರವೊಂದಕ್ಕೆ ಡಿಕ್ಕಿ ಹೊಡೆಯಿತೆನ್ನಲಾಗಿದೆ.
ಘಟನೆ ಕುರಿತು ಕಡೂರು ನಗರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೋಲಿಸರು ತನಿಖೆ ನಡೆಸಿದ್ದಾರೆ.



del.icio.us
Digg
Comments (0 posted):
Post your comment