SahilOnline - Kannada : ಸಾಹಿಲ್ ಆನ್ ‍ಲೈನ್- ಸತ್ಯದ ಒಂದು ಪ್ರತಿಬಿಂಬ: ಉಡುಪಿ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿಯ ಆತ್ಮಹತ್ಯೆ ಉಡುಪಿ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿಯ ಆತ್ಮಹತ್ಯೆ ================================================================================ yammar manvi on 28 July, 2010 07:00:00 ಹಿರಿಯಡ್ಕ, ಜು.28: ವಿಚಾರಣಾಧೀನ ಖೈದಿಯೊಬ್ಬ ಕಾರಾಗೃಹದ ಸ್ನಾನಗೃಹದಲ್ಲಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಂಜಾರು ಗ್ರಾಮದ ಕಾಜರಗುತ್ತು ಎಂಬಲ್ಲಿರುವ ಉಡುಪಿ ಜಿಲ್ಲಾ ಕಾರಾಗೃಹದಲ್ಲಿ ಇಂದು ಬೆಳಗ್ಗೆ 10 ಗಂಟೆ ನಡೆದಿದೆ. ಕೃಷ್ಣ ಮರಕಾಲ (38) ಎಂಬವರೇ ಆತ್ಮಹತ್ಯೆ ಮಾಡಿಕೊಂಡವರು. ಕೃಷ್ಣ ಐದು ದಿನಗಳ ಹಿಂದೆ ಇದೇ ಜೈಲಿನಿಂದ ಪರಾರಿಯಾಗಲು ಪ್ರಯತ್ನಿಸಿ 4 ಗಂಟೆಗಳಲ್ಲೇ ಪೊಲೀಸರು ಬೀಸಿದ ಬಲೆಗೆ ಬಿದ್ದು ಮತ್ತೆ ಸೆರೆಮನೆಗೆ ತಳ್ಳಲ್ಪಟ್ಟಿದ್ದನು. ಬ್ರಹ್ಮಾವರ ತಂತ್ರಾಡಿ ಯುವತಿ ಯೊಬ್ಬಳ ಕೊಲೆ ಪ್ರಕರಣದ ಆರೋಪಿಯಾಗಿದ್ದ ಕೊಕ್ಕರ್ಣೆ ಪೆಜಮಂಗೂರು ಗ್ರಾಮದ ಮೊಗವೀಪೇಟೆ ಗರಡಿ ಮನೆಯ ಕೃಷ್ಣ, ಇಂದು ಬೆಳಗ್ಗೆ ಸ್ನಾನಕ್ಕಾಗಿ ತೆರಳಿದ್ದ. ಈ ವೇಳೆ ಆತ ಸ್ನಾನದ ಕೋಣೆಯಲ್ಲಿ ಉಟ್ಟಿದ್ದ ಲುಂಗಿಯಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಜಿಲ್ಲಾ ಕಾರಾಗೃಹ ಅಧೀಕ್ಷಕ ಪಿ.ಎಸ್.ಅಂಬೇಕರ್ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಆತ ತನ್ನ ವಕೀಲರಿಗೆಂದು ಬರೆದಿಟ್ಟ ಪತ್ರವೊಂದು ದೊರೆತಿದೆ. ಅದೀಗ ಪೊಲೀಸರ ವಶದಲ್ಲಿದೆ ಎಂದವರು ಹೇಳಿದರು. ಕೃಷ್ಣ ಬರೆದಿರುವ ಪತ್ರದ ಕುರಿತಂತೆ ವಿವರ ನೀಡಿರುವ ಉಡುಪಿ ಡಿವೈಎಸ್ಪಿ ಜಯಂತ್ ವಿ.ಶೆಟ್ಟಿ, ಅದು ಜಾಮೀನು ಕೊಡಿಸುವಂತೆ ಆತ ತನ್ನ ವಕೀಲರಿಗೆ ಬರೆದ ಹಳೆಯ ಪತ್ರ. ಜಾಮೀನು ದೊರ ಕದ ಬಗ್ಗೆ ಅದರಲ್ಲಿ ದುಃಖ ತೋಡಿ ಕೊಂಡಿದ್ದ. ಪತ್ರದಲ್ಲಿ ದಿನಾಂಕ ಹಾಗೂ ಯಾರಿಗೆ ಬರೆದಿದ್ದು ಎಂಬುದು ಉಲ್ಲೇಖವಿಲ್ಲ. ಆತನಿಗೆ ಸರಿಯಾಗಿ ಬರೆಯಲು ಬಾರದ ಕಾರಣ, ಯಾರೋ ಕೈದಿಗಳೇ ಬರೆದು ಕೊಟ್ಟಿರಬೇಕು. ಅದರಲ್ಲಿ ಆತ್ಮಹತ್ಯೆಯ ಕುರಿತು ಯಾವುದೇ ಉಲ್ಲೇಖ ವಿಲ್ಲ ಎಂದು ಅವರು ವಿವರಿಸಿದರು. ತನಗೆ ಜಾಮೀನು ಸಿಗದು ಎಂಬ ಬೇಸರದಲ್ಲಿ ಆತ ಆತ್ಮಹತ್ಯೆ ಮಾಡಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಪೊಲೀಸರ ಹಿಂಸೆಯಿಂದ ಬೇಸತ್ತು ಆತ ಈ ಕೃತ್ಯಕ್ಕಿಳಿದಿರಬಹುದು ಎಂದು ಜೈಲಿನ ಮೂಲಗಳು ಸಂಶಯ ವ್ಯಕ್ತಪಡಿಸಿವೆ. ಕೃಷ್ಣ ಫೆ.25ರಂದು ನಡೂರು ಕಂಡಿಕೆಯ ಶೀನ ನಾಯ್ಕ ಎಂಬವರ ಪುತ್ರಿ ಸುಶೀಲಾ(28) ಎಂಬಾಕೆಯನ್ನು ಮುದ್ದುಮನೆಯಲ್ಲಿ ನಡೆಯುವ ಯಕ್ಷಗಾನಕ್ಕೆಂದು ಕರೆದೊಯ್ದು, ತಂತ್ರಾಡಿ ಯಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿ, ಕೊಲೈಗೆದ ಪ್ರಕರಣದ ಆರೋಪಿಯಾ ಗಿದ್ದಾನೆ. ತನಿಖೆ ನಡೆಸಿದ ಬ್ರಹ್ಮಾವರ ಪೊಲೀಸರು ಈತನನ್ನು ಮಾ.3ರಂದು ಬಂಧಿಸಿದ್ದರು. ಬಳಿಕ ನಡೆದ ವಿಚಾರಣೆಯ ವೇಳೆ ತನ್ನ ಕೃತ್ಯದ ಬಗ್ಗೆ ಪಶ್ಚಾತ್ತಾಪ ವ್ಯಕ್ತಪಡಿಸಿದ್ದನು ಎಂದು ಡಿವೈಎಸ್ಪಿ ತಿಳಿಸಿದ್ದಾರೆ. ಮೊದಲ ಆತ್ಮಹತ್ಯೆ: ಕಳೆದ ವರ್ಷ ಜನವರಿಯಲ್ಲಿ ಉದ್ಘಾಟನೆಗೊಂಡಿದ್ದ ಜಿಲ್ಲಾ ಕಾರಾಗೃಹದಲ್ಲಿ ನಡೆದ ಮೊದಲ ಆತ್ಮಹತ್ಯೆ ಪ್ರಕರಣ ಇದಾಗಿದೆ. ಕಳೆದ ಫೆಬ್ರವರಿ 19ರಂದು ವಿಚಾರಣೆ ಎದುರಿ ಸುತಿದ್ದ ಹಾವೇರಿಯ ಮಂಜು ಎಂಬಾತ ಬ್ಲೇಡಿನಿಂದ ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ವಿಫಲ ಯತ್ನ ನಡೆಸಿದ್ದನು.